ಬಿ ಎ ವಿವೇಕ ರೈ

‘ಉದಯವಾಣಿ’ಯಲ್ಲಿ ಬಂದ ನನ್ನ ಕವಿತೆ

November 22, 2009 Posted by bavivekrai | Uncategorized | | No Comments Yet

ಒಂದು ‘ಕೋಟಿನ ಭಾನುವಾರ’

ಮೊನ್ನೆ ರವಿವಾರ ವೂರ್ಜಬರ್ಗ್ ನಗರದಲ್ಲಿ ನಡೆದಾಡಿದರೆ ಆಶ್ಚರ್ಯ ಎಂದರೆ ಹೋಟೆಲ್ ಅಂಗಡಿಗಳೆಲ್ಲ ಬಾಗಿಲು ತೆರೆದು ಸ್ವಾಗತದ ನಗೆ ಬೀರುತ್ತಿವೆ.ಸದಾ ಮೌನ ಮುಗುದೆ ಆಗಿರುತ್ತಿದ್ದ ರವಿವಾರ ಮತ್ತು ಅದರ ಮುಸುಕಿನ ಒಳಗೆ ಮಲಗಿರುತ್ತಿದ್ದ ನಗರ ಇಂದೇನು ಮರೆತು ಬಾಗಿಲು ತೆರೆಯಿತೆ ಎಂದು ರವಿಯನ್ನೇ ಕೇಳೋಣವೆಂದರೆ ಆತ ಕುಲುಕುಲು ನಗುತ್ತಾ ತೇಲುವ ಬಿಳಿ ಸುಂದರಿಯರ ಸೆರಗಿನ ಹಿಂದೆ ಮರೆಯಾಗಿದ್ದ. ಬಟ್ಟೆಯ ಅಂಗಡಿಗಳಿಗೆಲ್ಲಾ ನೂಕುನುಗ್ಗಲು.ಅಂಗಡಿಗಳ ಒಳಗೆ ಹೊರಗೆ ಜಗಲಿಯಲ್ಲಿ ಮಹಡಿಯಲ್ಲಿ ಎಲ್ಲೆಲ್ಲು ನೇತುಹಾಕಿದ್ದಾರೆ ಕರಿಯ ಬಣ್ಣದ ಕೋಟುಗಳನ್ನು.ಆದಿನ ಚಳಿಗಾಲದ ಮೊದಲ ದಿನವಂತೆ.ಚಳಿ ಬಂದು ತಿಂಗಳೇ ಕಳೆದರೂ ಚಳಿಗಾಲಕ್ಕೆ ಒಂದು ಮುಹೂರ್ತ ಇದಬೇಕಲ್ಲ!ಅವರಿಗೆ ಆ ದಿನ ಚಳಿಗಾಲದ ತೋರಣ ನಾಂದಿ. ನಮ್ಮ ಕಡೆಯ ಯಕ್ಷಗಾನದ ಭಾಷೆಯಲ್ಲಾದರೆ ಅದು ‘ಸಭಾಲಕ್ಷಣ’

ಆದಿನ ಇಲ್ಲಿನವರಿಗೆ ‘ಕೋಟಿನ ಭಾನುವಾರ’.ನಮ್ಮಲ್ಲಿ ಹೊಸ ವರ್ಷಕ್ಕೆ ಹೊಸ ಬಟ್ಟೆ ಕೊಳ್ಳುವ ಸಂಭ್ರಮದಂತೆ ,ಇಲ್ಲಿ ಇವರಿಗೆ ಹೊಸ ಚಳಿಗಾಲಕ್ಕೆ ಹೊಸ ಕೋಟು ಕೊಳ್ಳುವ ಸಂಭ್ರಮ.

ಕೋಟು ಕೊಳ್ಳಲು, ಕೊಡಿಸಲು, ಚಾಚಿದ ತೋಳುಗಳಿದ್ದರೆ ತೊಡಿಸಲು ಎಲ್ಲೆಲ್ಲೂ ಸಡಗರ, ಆತುರ, ಕಾತರ. ಜೋಡಿಗಳು ಜೋಡಿ ಕೋಟು ಕೊಳ್ಳುವ, ಒಬರದ್ದನ್ನು ಇನ್ನೊಬ್ಬರು ತೊಟ್ಟುಕೊಂಡು, ನಕ್ಕು, ಒಮ್ಮೆ ಕೋಟನ್ನು, ಇನ್ನೊಮ್ಮೆ ತೊಟ್ಟವರನ್ನು ಮಗದೊಮ್ಮೆ ತೊಡಿಸಿದವರನ್ನು ಅಪ್ಪಿಕೊಂಡು, ಎಲ್ಲವೂ ಸರಿಯಾದ ಬಳಿಕವೇ ,ಅಂಗಡಿಯಿಂದ ಹೊರಬಂದಾಗ ,ಚಳಿರಾಯ ಹೆದರಿ ಪರಾರಿಯಿದ್ದ.

ಕೋಟಿನ ಭಾನುವಾರದ ದಿನದಿಂದ ಇಲ್ಲಿ ಒಂದು ಗಂಟೆ ಹೆಚ್ಚು ಎಂದರು.ಇಲ್ಲಿಗೆ ಬಂದ ಬಳಿಕ ನನ್ನ ವಾಚನ್ನು ಹಿಂದಕ್ಕೆ ಮುಂದಕ್ಕೆ ಇಟ್ಟೂ ಇಟ್ಟೂ, ನನಗೆ ಕಾಲದ ಲಾಭನಷ್ಟಗಳ ಲೆಕ್ಕ ಎಂದೋ ತಪ್ಪಿಹೋಗಿದೆ. ನನ್ನ ವಾಚು ಒಂದು ಸಮಯ, ಮೊಬೈಲ್ ಇನ್ನೊಂದು ಸಮಯ , ಲ್ಯಾಪ್ಟಾಪ್ ಮೂರನೆಯ ಸಮಯ ತೋರಿಸುತ್ತಿವೆ.ಆದರೆ ನಾನು ಈಗ ಸರ್ವತಂತ್ರ ಸ್ವತಂತ್ರ ಆದಕಾರಣ ನನ್ನದು ನಾಲ್ಕನೆಯ ಸಮಯ; ನಾಲ್ಕನೆಯ ಆಯಾಮ.ಮೊನ್ನೆ ಶನಿವಾರದವರೆಗೆ, ಇಲ್ಲಿಗೆ ಮತ್ತು ಊರಿಗೆ ಮೂರೂವರೆ ಗಂಟೆ ಹೆಚ್ಚು ಕಡಿಮೆ ಇದ್ದದ್ದು ಇನ್ನು ನಾಲ್ಕೂವರೆ ಗಂಟೆಯಂತೆ.ನಾನು,ಇಲ್ಲಿರುವ ನನ್ನ ಸುಮ್ಮನೆ ,ಮತ್ತೆ ಅಲ್ಲಿರುವ ನನ್ನ ಮನೆ -ಎಲ್ಲ ಅಲ್ಲಲ್ಲೇ ಇರುವಾಗ, ಮತ್ತೆ ಈ ಒಂದು ಗಂಟೆಯ ಲಾಭ ಯಾರಿಗೆ ಎಂದು ಗೊತ್ತಾಗಲಿಲ್ಲ. ಕೋಟಿನ ಅಂಗಡಿಯವರಿಗೋ? ಹೊಸ ಕೋಟು ತೊಟ್ಟುಕೊಂಡು ಚಳಿಯನ್ನು ಅಪ್ಪಿಕೊಂದವರಿಗೋ? ಹಳೆಯ ಕೋಟಿನಲ್ಲೇ ಒಂದು ಗಂಟೆ ಹೆಚ್ಚು ಹೊತ್ತು ಚಳಿಯ ಸುಖದ ಅಪ್ಪುಗೆಯವರದ್ದೋ?

ಸಂಜೆಯ ಹೊತ್ತು ನಗರ ಸಂಚಾರ ಮಾಡುತ್ತಾ, ಊರಿನಿಂದ ತಂಡ ನನ್ನ ಹಳೆಯ ಕೋಟಿನಲ್ಲೇ ಕುಳಿರ್ಗಾಳಿಯ ತಣ್ಣನೆಯ ಸೋಂಕಿಗೆ ಮೈನಿಮಿರಿಸುತ್ತಾ ,ಚರ್ಚಿನ ಗೋಪುರದ ಬಳಿಗೆ ಬಂದಾಗ ,ಗೋಪುರದ ಗಂಟೆ ಬಾರಿಸಿತು.ಡನಾ ಡನಾ ಡನಾ ಡನಾ ಡನಾ ಡನಾ ಡನಾ .ಹೌದು ಏಳು ಬಾರಿ.ಸಂಜೆ ಏಳರ ಹೊತ್ತು.ಹಳೆಯ ಕೋಟಿನ ಮುದುಕ ಸಿಕ್ಕಿದ. ಉಭಯ ಕುಶಲೋಪರಿ ವಿಚಾರಿಸಿದೆ.ಎಡ್ವರ್ಡ್ ಅವನ ಹೆಸರಂತೆ.ಅರುವತ್ತು ಕೋಟಿನ ಭಾನುವಾರಗಳನು ಕಂಡವನಂತೆ.’ಹೊಸತು ಕೋಟು ಕೊಳ್ಳಲಿಲ್ಲವೇ ಎಡ್ವರ್ಡ್ ‘ಎಂದು ಕೇಳಿದೆ.’ಹೊಸತು ಯಾವುದಿದೆ ಹೇಳಿ ‘ಎಂದ.’ಕೋಟು? ಗಂಟೆ?’ಎಂದೆ.’ಕೋಟು ಹೊಸತೇ ,ಪೌಲಿನ್ ಈ ಕೋಟು ಕೊಡಿಸಿದಾಗ ಇದು ಹೊಸದೇ.ಮತ್ತೆ ಅವಳು ಬೇರೆ ಕೋಟು ಕೊಂಡಳು.ನಾನು ಕೋಟು ಬದಲಿಸಲಿಲ್ಲ.ನನಗೆ ಇದು ಈಗಲೂ ಹೊಸತೇ.ಇವತ್ತು ಕೋಟು ಕೊಂಡವರ ಕೋಟು ಮಾತ್ರ ನೋಡಬೇಡಿ, ಕೋಟಿನೊಳಗೆ ಅಂಗಿ ಎಷ್ಟು ಹರಿದಿದೆ ನೋಡಿ.ನನ್ನ ಕೋಟು ಹರಿದಿದೆ, ಆದರೆ ಅಂಗಿ ಹರಿದಿಲ್ಲ ಎಂದ.’

ಕೊರೆವ ಚಳಿಯಲ್ಲಿ ಬೆವರತೊಡಗಿದೆ ನಾನು.

‘ಎಡ್ವರ್ಡ್ ,ಗಂಟೆ ಎಷ್ಟಾಯಿತು?’ ಕೇಳಿದೆ ,ಆತಂಕ ಗೊಂದಲದಲ್ಲಿದ್ದೆ ನಾನು.

‘ಗಂಟೆ ಎಷ್ಟಾಯಿತೆಂದು ಕೇಳಿದರೆ ಏನ ಹೇಳಲಿ ನಾನು ? ನಾನು ಹೊಡೆದಷ್ಟೇ ಗಂಟೆ!’ಎಂದ.

ಕೆ.ಎಸ್. ನರಸಿಂಹಸ್ವಾಮಿ ಕವನ ನೆನಪಾಗಿ ಗಡಿಯಾರದಂಗಡಿಯ ಮುಂದೆ ನಿಂತ ಬೆದರಿದ ಕುದುರೆಯಾಗಬಾರದೆಂದು ಹೆದರಿ ಕಾಲವನ್ನು ಮೀರಿ ಕಾಲು ಹಾಕಿದೆ.

November 18, 2009 Posted by bavivekrai | ಕಿಟ್ಟೆಲ್ ನಾಡಿನಲ್ಲಿ | | No Comments Yet

‘ವಿಜಯ ಕರ್ನಾಟಕ’ದಲ್ಲಿ ನನ್ನ ಲೇಖನ

ಜರ್ಮನಿಯಲ್ಲಿ ಕನ್ನಡ ದ ಕೆಲಸಕ್ಕೆ ಹೊರಟು ನಿಂತಾಗ ಇನ್ನೇನು ರಾಜ್ಯೋತ್ಸವ ಬೆನ್ನ ಹಿಂದಿದೆ ಎಂಬುದು ನೆನಪಿರಲಿಲ್ಲ. ಆ ನೆನಪು ಮಾಡಿದ್ದು ವಿಜಯ ಕರ್ನಾಟಕ. ರಾಜ್ಯೋತ್ಸವದ ಅಂಗವಾಗಿ ಜರ್ಮನಿಯಲ್ಲಿ ಕನ್ನಡದ ಕಲರವದ ಬಗ್ಗೆ ಲೇಖನ ಕೊಡುವಂತೆ ಕೇಳಿದರು. ವಿಜಯ ಕರ್ನಾಟಕದ ಸಂಪಾದಕರಾದ ವಿಶ್ವೇಶ್ವರ ಭಟ್ ಹಾಗೂ ಸಾಪ್ತಾಹಿಕದ ವಿ ಎನ್ ವೆಂಕಟಲಕ್ಷ್ಮಿ ಅವರಿಗೆ ನನ್ನ ವಂದನೆಗಳು.

ಅಲ್ಲಿ ಹೋಗಿ ಬರೆಯುವುದು ಹೇಗೆ ಎಂದು ಯೋಚಿಸುತ್ತಿದ್ದಾಗ ಜಿ ಎನ್ ಮೋಹನ್ ಬೆಂಗಳೂರಿನಿಂದಲೇ ನನಗೆ ಮೇಲ್ ಮೂಲಕ ಯೂನಿಕೋಡ್ ನಲ್ಲಿ ಕನ್ನಡ ಬರೆಯುವುದನ್ನು ಕಲಿಸಿಕೊಟ್ಟರು. ಎಂ ಬೈರೇಗೌಡ ಅವರು ನನ್ನ ‘ಗಿಳಿಸೂವೆ’ ಅಂಕಣ ಬರಹಗಳನ್ನು ಮತ್ತೆ ಓದಲು ಸಿಗುವಂತೆ ವ್ಯವಸ್ಥೆ ಮಾಡಿದರು. ಮೇಫ್ಲವರ್ ಮೀಡಿಯಾ ಹೌಸ್ ನವರು ಜರ್ಮನಿಯಲ್ಲಿ ಸಿದ್ಧಲಿಂಗಯ್ಯ ನವರ ‘ಸಾವಿರಾರು ನದಿಗಳು’ ಕವನದ ಪಾಠ ಮಾಡಲು ಬೇಕಾದ ಆಡಿಯೋ ಕಳಿಸಿಕೊಟ್ಟರು. ಹೀಗೆ ಈ ಎಲ್ಲಾ ಕಾರಣಗಳಿಂದ ಈ ಲೇಖನ ಮೂಡಿ ಬಂದಿದೆ.

ಇಷ್ಟು ದಿನ ವಿಶ್ಲೇಷಣಾತ್ಮಕ ಒಳನೋಟಗಳ ಬರಹಗಳಲ್ಲಿ ತೊಡಗಿಸಿಕೊಂಡಿದ್ದ ನಾನು ಒಂದಿಷ್ಟು ಬೇರೆ ಶೈಲಿಯನ್ನು ಅಳವಡಿಸಿಕೊಳ್ಳಲು ಯತ್ನಿಸುತ್ತಿದ್ದೇನೆ. ಭಾಷೆಗಿರುವ ಅನಂತ ಸಾಧ್ಯತೆಗಳನ್ನು ಅರಿಯುವ ನಿಟ್ಟಿನಲ್ಲಿ ಪುಟ್ಟ ಪ್ರಯತ್ನ ಇದು. ಹಾಗಾಗಿಯೇ ಡೈರಿ ರೂಪದಲ್ಲಿ ನೆನಪುಗಳನ್ನು ಮೆಲುಕು ಹಾಕುವ ಲೇಖನಕ್ಕೆ ವಿಜಯ ಕರ್ನಾಟಕದ ಈ ಲೇಖನ ಇಂಬುಗೊಟ್ಟಿದೆ ಎಂದೇ ಹೇಳಬಹುದು. ಆ ಕಾರಣಕ್ಕಾಗಿ ಎಲ್ಲರಿಗೂ ವಂದನೆ

-ವಿವೇಕ

20091101sA001101005

ಬೆಂಗಳೂರಿನಲ್ಲಿ ಗೆಳೆಯರಿಂದ ಬೀಳ್ಕೊಂಡಾಗ ಇನ್ನೂ ದೀಪಾವಳಿಗೆ ತೆರೆ ಬಿದ್ದಿರಲಿಲ್ಲ. ಎತ್ತ ನೋಡಿದರೂ ದೀಪಗಳ ಸಾಲು ಸಾಲು. ಅಲ್ಲಿಂದ ಹಾರಿ ಫ್ರಾಂಕ್ ಫರ್ಟ್ ಗೆ ಬಂದಿಳಿದಾಗ ಇಲ್ಲಿಯೂ ದೀಪಾವಳಿಯೇ ಎಂದು ಒಂದು ಕ್ಷಣ ಆಶ್ಚರ್ಯವಾಯ್ತು!. ಎಲ್ಲಿ ಕಣ್ಣು ಹಾಯಿಸಿದರೂ ಬೆಳಕಿನ ಚುಕ್ಕಿಗಳು. ನಾನಾ ದೇಶಗಳಿಂದ ಜರ್ಮನಿಯ ಫ್ರಾಂಕ್ ಫರ್ಟ್ ಗೆ ಬಂದಿಳಿಯುವ ಸಾವಿರಾರು ವಿಮಾನಗಳು ಇಲ್ಲಿ ಒಂದು ಮಿನಿ ಜಗತ್ತನ್ನೇ ಸೃಷ್ಟಿಸಿಬಿಡುತ್ತದೆ. ಎಲ್ಲಾ ದೇಶ, ಎಲ್ಲಾ ಭಾಷೆ ಇಲ್ಲಿ ಒಂದು ಕ್ಷಣ ನೆಲೆ ನಿಲ್ಲಲೇಬೇಕು. ಮಂಗಳೂರು-ಹಂಪಿ-ಮೈಸೂರಿನಿಂದ ಈಗ ಜರ್ಮನಿಗೆ ಬಂದಿದ್ದ ನಾನೂ ಸಹಾ ಕನ್ನಡದ ಉತ್ಸಾಹವನ್ನು ಹೊತ್ತು ತಂದಿದ್ದೆ. ಪ್ರೊ ಹೈದ್ರೂನ್ ಬ್ರೂಕ್ನರ್ ಬಂದು ಹೆಗಲು ಮುಟ್ಟಿ ಶುದ್ಧ ಕನ್ನಡದಲ್ಲಿ ‘ನಮಸ್ಕಾರ’ ಎಂದಾಗ ಜರ್ಮನಿಯಲ್ಲಿ ಕನ್ನಡಕ್ಕೇನು ಕೆಲಸ? ಎನಿಸಲಿಲ್ಲ. ಇಲ್ಲಿ ಕನ್ನಡ ಎನ್ನುವುದು ಬರೀ ನವೆಂಬರ್ ನ ಉತ್ಸಾಹ ಮಾತ್ರ ಅಲ್ಲ. ಕನ್ನಡವನ್ನು ನೋಡುವ, ಆಡಲು ಕಲಿಯುವ, ಬರೆಯಲು ತಿದ್ದುವ, ಮಾತನಾಡುವುದನ್ನು ಕೇಳುವ, ಇನ್ನೂ ಮುಂದಕ್ಕೆ ಹೋಗಿ ಕನ್ನಡದ ಕಥೆ, ಕಾದಂಬರಿ ಓದುವ, ಕನ್ನಡದ ತಾಳೆಗರಿಯತ್ತಲೂ ಕಣ್ಣು ಹಾಯಿಸುವ, ‘ಕನ್ನಡವೆನೆ ಕುಣಿದಾಡುವುದೆನ್ನೆದೆ, ಕನ್ನಡವೆನೆ ಕಿವಿ ನಿಮಿರುವುದು’ ಎಂಬ ಮನಸ್ಸುಗಳು ಇವೆ.

ಬ್ರೂಕ್ನರ್ ಗೆ ಕನ್ನಡ ಎನ್ನುವುದು ನೀರು ಕುಡಿದಷ್ಟೇ ಸಲೀಸು. ಕನ್ನಡಿಗರಿಗೂ ಕನ್ನಡದ ಪಾಠ ಹೇಳಿಕೊಡುವಷ್ಟು ಅದ್ಯಯನ ನಡೆಸಿದ್ದಾರೆ. ಕಳೆದ ೩೦ ವರ್ಷಗಳಿಂದಲೂ ಕನ್ನಡದ ಮೋಹಕ್ಕೆ ಬಿದ್ದಿರುವ ಬ್ರೂಕ್ನರ್ ಅವರಿಗೆ ಮಂಗಳೂರು- ಹಂಪಿ ವಿ ವಿ, ಉಡುಪಿಯ ಜಾನಪದ ಕಲೆಗಳ ಅಧ್ಯಯನ ಕೇಂದ್ರ, ಮೈಸೂರಿನ ಧ್ವನ್ಯಾಲೋಕ, ಸಿ ಐ ಐ ಎಲ್ ಎಲ್ಲವೂ ಇವರಿಗೆ ಜರ್ಮನಿಯ ಭಾಗವೇನೋ ಎನ್ನುವಷ್ಟು ಸುಪರಿಚಿತ. ತಾವು ಮಾತ್ರವಲ್ಲ ತಮ್ಮ ಜರ್ಮನ್ ವಿದ್ಯಾರ್ಥಿಗಳ ದಂಡನ್ನೂ ಕಟ್ಟಿಕೊಂಡು ಓಡಾಡಿದ್ದಾರೆ.

ಜರ್ಮನಿ ಯ ದೊಡ್ಡ ರಾಜ್ಯ ಬವೇರಿಯಾ. ಬವೇರಿಯಾ ವಿಶ್ವವಿದ್ಯಾಲಯಗಳಿಗೆ ಹೆಸರುವಾಸಿ. ಇಲ್ಲಿನ ವೂರ್ಜ್ ಬರ್ಗ್ ಗೆ ನಾನು ಕಾಲಿಟ್ಟಾಗ ಚಳಿ ಸೊನ್ನೆಯಿಂದ ಸೊನ್ನೆಗೆ ಪಯಣ ಆರಂಭಿಸಿತ್ತು ಮಾಯಿನ್ ನದಿ ನಗರವನ್ನು ಇಬ್ಬಾಗ ಮಾಡುತ್ತಾ ಹರಿಯುತ್ತದೆ. ಇಲ್ಲಿನ ಕೋಟೆ ವೂರ್ಜ್ ಬರ್ಗ್ ನ ಹೆಗ್ಗುರುತು. ನನ್ನ ಅತಿಥಿ ಗೃಹದ ೯ ನೇ ಮಹಡಿಯಿಂದ ನನ್ನ ‘ಇರುಳ ಕಣ್ಣು’ ಹಾಯಿಸಿದೆ. ಇಡೀ ವೂರ್ಜ್ ಬರ್ಗ್ ನಗರ ಚಳಿಯಿಂದ ಗಡ ಗಡ ನಡುಗುತ್ತಾ ನಿಂತಿದೆಯೇನೋ ಅನಿಸುತ್ತಿತ್ತು. ದಟ್ಟವಾಗಿ ಕವಿದ ಮಂಜಿನ ಮಧ್ಯೆ ಕೋಟೆಯ ಬುರುಜು ಮಾತ್ರ ಹೊರ ಚಾಚಿಕೊಂಡಿರುವುದನ್ನು ನೋಡುವುದೇ ಖುಷಿ. ಬೆಳಗ್ಗೆ ಇನ್ನೂ ಏಳು ಗಂಟೆಯಾಗಿಲ್ಲ. ಆಗಲೇ ವೂರ್ಜ್ ಬರ್ಗ್ ನ ಈ ವಿಶ್ವವಿದ್ಯಾಲಯಕ್ಕೆ ಜೀವ ಬಂದು ಬಿಟ್ಟಿದೆ. 1.30 ಲಕ್ಷ ಜನಸಂಖ್ಯೆಯ ವೂರ್ಜಬರ್ಗ್ ನಲ್ಲಿ ಯೂನಿವರ್ಸಿಟಿ ವಿಧ್ಯಾರ್ಥಿಗಳ ಸಂಖ್ಯೆಯೇ ೨೧ ಸಾವಿರ. ವಿವಿಯ ಸಿಬ್ಬಂದಿ ೧೦ ಸಾವಿರ. ಇವರಲ್ಲಿ ೪೦೦ ಪ್ರಾಧ್ಯಾಪಕರ ಸಹಿತ ೩ ಸಾವಿರ ಮಂದಿ ಶೈಕ್ಷಣಿಕ ಸಿಬ್ಬಂದಿ.

ಇಲ್ಲಿ ಕನ್ನಡ ಅಧ್ಯಯನ ಒಂದು ಭಾಗವಾಗಿರುವ ಇಂಡಾಲಜಿ ವಿಭಾಗ ಇರುವುದು ಬೆಟ್ಟದ ಮೇಲೆ. ದಿನಾ ಮುಳ್ಳಯ್ಯನ ಗಿರಿಯನ್ನು ಏರಿದ ಅನುಭವ. ಸಾಂಕೇತಿಕ ಎನ್ನುವಂತೆ ವಿವಿಯ ಮಾನವಿಕ, ಸಾಮಾಜಿಕ ಫ್ಯಾಕಲ್ಟಿಗಳು, ವಿಶಾಲ ಗ್ರಂಥಾಲಯ ಎಲ್ಲ ಬೆಟ್ಟದ ತುದಿಯಲ್ಲಿವೆ. ನಾನೇರುವೆತ್ತರಕೆ ನೀನೇರಬಲ್ಲೆಯಾ? ಎನ್ನುವ ಸವಾಲು. ನಾನು ದೀರ್ಘ ರಜೆಯ ನಂತರ ವಿಶ್ವವಿದ್ಯಾಲಯ ಬಾಗಿಲು ತೆರೆಯುವ ಸಮಯಕ್ಕೆ ಸರಿಯಾಗಿ ಇಲ್ಲಿದ್ದೇನೆ. ಇಲ್ಲಿ ವಿದ್ಯಾರ್ಥಿ ಯಾವ ವಿಷಯ ಆರಿಸಿಕೊಳ್ಳಬೇಕು ಏನ್ನುವ ಪ್ರಕ್ರಿಯೆಯೇ ಕುತೂಹಲಕರವಾಗಿದೆ. ಅದು ಪಕ್ಕಾ ನಮ್ಮ ‘ಸ್ವಯಂವರ’ದ ಹಾಗೇ. ಒಂದು ಹಾಲ್ ನಲ್ಲಿ ವಿದ್ಯಾರ್ಥಿಗಳು ನೆರೆದಿರುತ್ತಾರೆ. ಇಂಡಾಲಜಿ ವಿಭಾಗ ನೀಡುವ ಕೋರ್ಸ್ ಗಳ ಬಗ್ಗೆ ಮೊದಲು ವಿವರಣೆ. ನಂತರ ವಿದ್ಯಾರ್ಥಿಗಳು ತಮಗೆ ಬೇಕಾದ ವಿಷಯಕ್ಕೆ ‘ಮಾಲೆ’ ಹಾಕುತ್ತಾ ಹೋಗುತ್ತಾರೆ. ಎಲ್ಲಾ ವಿವರಣೆ ಜರ್ಮನ್ ನಲ್ಲಿ ನಡೆಯುತ್ತಿತ್ತು. ಕನ್ನಡದ ವಿಷಯ ಬಂದಾಗ ನಾನು ಅನಿವಾರ್ಯವಾಗಿ ಇಂಗ್ಲಿಷ್ ಗೆ ಹೊರಳಿದೆ. ಜರ್ಮನ್ ವಿದ್ಯಾರ್ಥಿಗಳು- ಕನ್ನಡ ಅದ್ಯಯನ!. ಕೆಲವರು ಕನ್ನಡ ಕಲಿಯಲು ಕೈ ಎತ್ತಿದರು.ಅವರ ಕೈ ಕಲ್ಪವೃಕ್ಷ ಆಗಲಿ ಅಂದುಕೊಂಡೆ.

ಕನ್ನಡವನ್ನು ಹೊಸತಾಗಿ ಕಲಿಯುವ ತಂಡ ಒಂದನೆಯದು. ಈಗಾಗಲೇ ಕನ್ನಡ ಕಲಿತು ೪ನೇ ಸೆಮಿಸ್ಟರ್ ನಲ್ಲಿ ಕನ್ನಡ ಕಲಿಯುವ ತಂಡ ಎರಡನೆಯದು. ಕನ್ನಡ ಓದಲು ಬರೆಯಲು ಅಭ್ಯಾಸ ಆಗಿ ಕಥೆಯಂತಹ ಸಾಹಿತ್ಯ ಓದಲು ತೊಡಗಿರುವ ತಂಡ ಮೂರನೆಯದು.. ಈ ಎಲ್ಲದರ ಜೊತೆಗೆ ಕರ್ನಾಟಕ ಅಧ್ಯಯನ ಹೊಸತಾಗಿ ಆರಂಭಿಸಿದ್ದೇವೆ. ಈ ಬಗ್ಗೆ ಆಸಕ್ತರ ಸಭೆ ಕರೆದಿದ್ದೇವೆ. ಕನ್ನಡದ ಮೊದಲ ತಂಡಕ್ಕೆ ಎಂಟು, ಪ್ರೌಢರ ಎರಡನೆಯ ಗುಂಪಿಗೆ ಐದು, ಕನ್ನಡ ಜಾಣರ ಮೂರನೆಯ ಟೀಮಿಗೆ ಐದು ಮಂದಿ ಸೇರಿದ್ದಾರೆ. ಕನ್ನಡವನ್ನು ಹೊಸ ತಂಡದ ಕಿವಿಗೆ ಕೇಳಿಸುವ ನನ್ನ ಕೆಲಸ ಆರಂಭವಾಯಿತು. ಮೈಸೂರಿನ ಸಿ.ಐ.ಐ.ಎಲ್.ನಲ್ಲಿ ಲಿಂಗದೇವರು ಹಳೆಮನೆ ಸಿದ್ಧಪಡಿಸಿದ ‘ಭಾಷಾ ಮಂದಾಕಿನಿ’ ಯೋಜನೆಯ ‘ದ್ರಾವಿಡ ಭಾಷೆಗಳಲ್ಲಿ ಕನ್ನಡ ಭಾಷೆ’ ಡಿವಿಡಿ ತೋರಿಸಿದೆ. ಬಳಿಕ ಸರಳ ಮಾತುಕತೆ ಆರಂಭವಾಯಿತು. ಒಂದೂವರೆ ಗಂಟೆಯ ಬಳಿಕ ಅವರಿಗೆಲ್ಲ ‘ನಾನು ಯಾರು ‘ನೀನು ಯಾರು’ ‘ಅವನು ಮತ್ತು ಅವಳು ಯಾರು’ ಎಂದು ಗೊತ್ತಾಯಿತು. ಅವರೆಲ್ಲ ಕನ್ನಡದಲ್ಲಿ ನಾಲ್ಕು ಮಾತನ್ನು ನವಂಬರ್ ಒಂದರ ಮೊದಲೇ ಆಡಿದರು ಮತ್ತು ನವಂಬರ್ ಬಳಿಕವೂ ಆಡುವ ವಿಶ್ವಾಸ ನೀಡಿದರು.

20091101s_002101001ನನಗೂ ಜರ್ಮನಿಗೂ ಒಂದು ನಂಟಿದೆ. ಅದು ‘ಮಂಗಳೂರು ಸಮಾಚಾರ’. ಕನ್ನಡದ ಮೊದಲ ಪತ್ರಿಕೆಯ ಊರಿನಿಂದ ಬಂದವನು ನಾನು ಹಾಗಾಗಿ ಇಲ್ಲಿ ಅದೇ ನನ್ನ ಪಾಸ್ ಪೋರ್ಟ್ ಕೂಡಾ. ಕನ್ನಡವನ್ನು ಕಟ್ಟಿದ ಹರ್ಮನ್ ಮೊಗ್ಲಿಂಗ್, ರೆವರೆಂಡ್ ಕಿಟ್ಟೆಲ್ ಜರ್ಮನಿಯವರಾದ್ದರಿಂದ ಜರ್ಮನಿಯ ನೆಲದಲ್ಲಿ ನಾನು ಪರಕೀಯನಲ್ಲವೇ ಅಲ್ಲ. ಜರ್ಮನಿಯ ಹಲವು ವಿಶ್ವವಿದ್ಯಾಲಯಗಳು ಕನ್ನಡವನ್ನು ಪ್ರೀತಿಯಿಂದ ನೋಡಿಕೊಂಡಿವೆ. ಇಲ್ಲಿನ ವಿಶ್ವವಿದ್ಯಾಲಯಗಳು ಅನಂತಮೂರ್ತಿಯವರ ಸಂಸ್ಕಾರ, ಘಟಶ್ರಾದ್ಧ ಸಿನೆಮಾ ನೋಡಿವೆ. ಕಾರ್ನಾಡರ ಚಲುವಿ ಸಿನೆಮಾ ಜರ್ಮನ್ ವಿದ್ಯಾರ್ಥಿಗಳ ಮಥನಕ್ಕೆ ಸಿಕ್ಕಿದೆ. ಹಯವದನ, ನಾಗ ಮಂಡಲ ನಾಟಕಗಳನ್ನು ವಿಜಯ್ ಮೆಹ್ತಾ ಜರ್ಮನ್ ಭಾಷೆಯಲ್ಲಿಯೇ ಪ್ರದರ್ಶಿಸಿದ್ದಾರೆ. ನೀನಾಸಂನ ಭಾಸ ಭಾರತ, ತುಕ್ರನ ಕನಸು ನಾಟಕದ ವಿಡಿಯೋ ರೆಕಾರ್ಡಿಂಗ್ ಇಲ್ಲಿ ಲಭ್ಯ. ಯಕ್ಷಗಾನ ಇಲ್ಲಿನ ವಿದ್ಯಾರ್ಥಿಗಳಿಗೆ ಅಪರಿಚಿತವಲ್ಲ. ಎ ಕೆ ರಾಮಾನುಜನ್ ವಚನಗಳ ಬಗ್ಗೆ ಗಂಟೆಗಟ್ಟಲೆ ಮಾತನಾಡಿದ್ದಾರೆ. ಯು ಆರ್ ಅನಂತಮೂರ್ತಿಯವರು ತಮ್ಮ ಕಥೆ ಕಾದಂಬರಿಗಳನ್ನು ಚರ್ಚಿಸಿದ್ದಾರೆ. ಕನ್ನಡ ಸಾಹಿತ್ಯದ ಬಗ್ಗೆ ಉಪನ್ಯಾಸ ಕೊಟ್ಟಿದ್ದಾರೆ. ವಸಹತೀಕರಣ ಹಾಗೂ ಕನ್ನಡ ಸಾಹಿತ್ಯದ ಸಂಬಂಧವನ್ನು ಬಿಡಿಸಿಟ್ಟಿದ್ದಾರೆ. ೨೦ ವರ್ಷಗಳ ಹಿಂದೆ ನಾನು ಟ್ಯೂಬಿಂಗನ್ ಗೆ ಭೇಟಿ ಕೊಟ್ಟಾಗ ಆದ ಅಚ್ಚರಿ ಇನ್ನೂ ನನ್ನೊಳಗೆ ನೆನಪಾಗಿ ಉಳಿದಿದೆ. ಇಲ್ಲಿನ ಗ್ರಂಥಾಲಯದಲ್ಲಿ ಹಸ್ತಪ್ರತಿಗಳನ್ನು ನೋಡುತ್ತಾ ಇದ್ದೆ. ಆಗ ‘ದೈವ ಹುಟ್ಟು’ ಎಂಬ ಕನ್ನಡ ಲಿಪಿಯಲ್ಲಿದ್ದ ತುಳು ಪಾಡ್ದನಗಳ ಹಸ್ತಪ್ರತಿ ಕಾಣಿಸಿತು. ವಿಚಾರ ಸಂಕಿರಣವೊಂದರಲ್ಲಿ ಭಾಗವಹಿಸಲು ಜರ್ಮನಿಗೆ ಬಂದಿದ್ದ ನಾನು ನಿರಂತರವಾಗಿ ಜರ್ಮನಿಯ ಜೊತೆ ಸಂಬಂಧ ಮುಂದುವರೆಸಿಕೊಳ್ಳಲು ಕಾರಣವಾಗಿದ್ದು ಈ ಘಟನೆ.

ಪ್ರೊ ಹೈದ್ರೂನ್ ಬ್ರೂಕ್ನರ್ ಅವರಂತೂ ಜರ್ಮನಿ ಹಾಗೂ ಕನ್ನಡದ ಅನಧಿಕೃತ ರಾಯಭಾರಿ. ಭಾರತಕ್ಕೆ ಬಂದು ಸಂಸ್ಕೃತದಲ್ಲಿ ಪಿ ಎಚ್ ಡಿ ಮಾಡಿ, ತುಳು ಪಾಡ್ದನಗಳನ್ನು ಸಂಗ್ರಹ ಮಾಡಿದವರು. ಕನ್ನಡಕ್ಕೆ ಸಂಬಂಧಿಸಿದ ಅಮೂಲ್ಯವಾದ ಖಾಸಗಿ ಸಂಗ್ರಹವನ್ನೂ ಹೊಂದಿದ್ದಾರೆ. ಜರ್ಮನಿಯ ಇಂಡಾಲಜಿ ವಿಭಾಗಗಳಲ್ಲಿ ಕನ್ನಡ ಗಟ್ಟಿಯಾಗಿ ನೆಲೆಯೂರಲು ಅವಕಾಶ ಸಿಕ್ಕಿದ್ದೇ ಬ್ರೂಕ್ನರ್ ಹಾಗೂ ಅವರಂತಹವರ ಆಸಕ್ತಿಯಿಂದ. ವಿದ್ಯಾರ್ಥಿಗಳಲ್ಲದ ಜರ್ಮನಿಗರಿಗೂ ಕನ್ನಡದ ಕ್ಲಾಸ್ ನಡೆಸುತ್ತಾರೆ. ಇವರ ಒತ್ತಾಸೆಯಿಂದಾಗಿಯೇ ಇಲ್ಲಿ ಪಂಪ, ಕುಮಾರವ್ಯಾಸ, ರಾಘವಾಂಕ, ಹರಿಹರ, ಲಕ್ಷ್ಮೀಶ, ವಚನಕಾರರು, ಹರಿದಾಸರು ಜರ್ಮನಿಯ ನೆಲದಲ್ಲಿ ನಡೆದಾದುವಂತಾಗಿದೆ. ಹೈಡಲ್ ಬರ್ಗ್ ನ ಸೌತ್ ಏಷ್ಯಾ ಇನ್ಸ್ಟಿಟ್ಯೂಟ್ ನ ಇಂಡಾಲಜಿ ವಿಭಾಗದಲ್ಲಿ ದಕ್ಷಿಣ ಕನ್ನಡದ ಡಾ.ಕೋಟ ಪರಮೇಶ್ವರ ಐತಾಳರು ಕನ್ನಡ ಭೋದಿಸಿದ್ದಾರೆ. ಇದಲ್ಲದೆ ಕನ್ನಡದ ಮಹತ್ವದ್ದನ್ನು ಜರ್ಮನಿಗೆ ಅನುವಾದಿಸಿದ್ದಾರೆ.

Read more »

November 1, 2009 Posted by bavivekrai | ಯಾನ್ ವಿವೇಕ ರೈ | | 5 Comments

ನಾನು ಇನ್ನು ಮುಂದೆ ಇಲ್ಲಿ ಲಭ್ಯ

rai card

October 29, 2009 Posted by bavivekrai | ಯಾನ್ ವಿವೇಕ ರೈ | | No Comments Yet

ನನ್ನ ಮೂರು ಪುಸ್ತಕಗಳು

irula kannu final cover

hindanahejje-cover

bahiranga

October 29, 2009 Posted by bavivekrai | ಇರುಳ ಕಣ್ಣು | | No Comments Yet

9 ನೇ ಮಹಡಿಯಲ್ಲಿ ‘ಇರುಳ ಕಣ್ಣು’

-ಬಿ ಎ ವಿವೇಕ ರೈ

 

800px-Würzburg

ನಮ್ಮ ದೇಶದ ಸಮಯ ಬೆಳಗ್ಗೆ 11.30 ಕ್ಕೆ ಜರ್ಮನಿಯ ನೆಲದಲ್ಲಿ ಕಾಲು ಇಟ್ಟ ಬಳಿಕ ಈ ಕ್ಷಣದವರೆಗೆ ನಿದ್ದೆ ಮಾಡಿಲ್ಲ. ವೂರ್ಜ್ ಬರ್ಗ್ ಮುಟ್ಟಿದ್ದು ೧ ಗಂಟೆಗೆ. ಪ್ರೊ.ಹೈದ್ರುನ್ ಬ್ರುಕ್ನರ್ ಜೊತೆಗೆ ಪ್ರಯಾಣ, ಕನ್ನಡ ಮತ್ತು ಕರ್ನಾಟಕ ಅಧ್ಯಯನ ಬಗ್ಗೆ ಮಾತು, ಮಾತು, ಮಾತು…

ನಾಳೆ ವಿದ್ಯಾರ್ಥಿಗಳನ್ನ ಭೇಟಿ ಆಗುವುದು, ವಾರದ ಚಟುವಟಿಕೆಗಳು, ಸಮಾಲೋಚನಾ ಸಭೆಗಳು ಹೀಗೆ. ಜುಲೈ 30 ರಂದು ಕರ್ನಾಟಕ ಮತ್ತು ಬವೇರಿಯಾ ಸರಕಾರಗಳು ಪರಸ್ಪರ ಒಡಂಬಡಿಕೆಯ ಕ್ರಿಯಾಯೋಜನೆಗೆ ಸಹಿಹಾಕಿವೆ. ಕೈಗಾರಿಕೆ, ಮಾಹಿತಿ ತಂತ್ರಜ್ಞಾನ, ಮಾಧ್ಯಮ, ಶಾಲಾ ಶಿಕ್ಷಣ, ಜೈವಿಕ ತಂತ್ರಜ್ಞಾನ ವಿಷಯಗಳಲ್ಲಿ. ಕನ್ನಡ ಮತ್ತು ಕರ್ನಾಟಕ ಅಧ್ಯಯನವನ್ನು ಇದಕ್ಕೆ ಸೇರಿಸಬೇಕು.

ಕನ್ನಡವನ್ನೂ ಕಲಿಸುವ ಇಂಡಾಲಜಿ ವಿಭಾಗ ಇಲ್ಲಿದೆ

ವೂರ್ಜ್ ಬರ್ಗ್ ವಿವಿಯ ಇಂಡಾಲಜಿ ವಿಭಾಗದಲ್ಲಿ ಅಕ್ಟೋಬರ್ 2 ರಂದು ಗಾಂಧೀ ಜಯಂತಿ ವಿಶಿಷ್ಟವಾಗಿ ಆಚರಿಸಿದ್ದಾರೆ. ಇಂದಿನ ಜರ್ಮನ್ ಇಂಡಾಲಜಿ ಬಗ್ಗೆ ಬ್ರುಕ್ನರ್ , ಇಂಡೋ ಜರ್ಮನ್ ಸಹಕಾರದ ಉಪಗ್ರಹ ಕಾರ್ಯಕ್ರಮದ ಬಗ್ಗೆ ಕಾರ್ತಿಕ್, ವೂರ್ಜ್ ಬರ್ಗ್ ವಿವಿಯಲ್ಲಿ ಭಾರತೀಯ ವಿಧ್ಯಾರ್ಥಿಗಳ ಬಗ್ಗೆ ಬಯೋ ಇನ್ಫಾರ್ಮ್ಯಾಟಿಕ್ಸ್ ವಿಭಾಗದ ಸಂತೋಷ್ ನೀಲಾ, ವೂರ್ಜ್ ಬರ್ಗ್ ಗಾಂಧೀ ಶಾಂತಿ ಪ್ರತಿಷ್ಠಾನದ ಬಗ್ಗೆ ಇಂಡಾಲಜಿ ವಿಭಾಗದ ಮರಿಯಾ ಹೆಸ್ಸೆ, ವೂರ್ಜ್ ಬರ್ಗ್ ವಿ ವಿ ಯವರ ಮಾತುಗಳು.ಮೂನಿಕ್ನಲ್ಲಿರುವ ಭಾರತೀಯ ಕಾನ್ಸುಲೇಟ್ ಜನರಲ್ ಅನುಪ್ ಮುದಗಲ್ ಅವರ ಆಶಯ ಭಾಷಣ. ಕೊನೆಯಲ್ಲಿ ಗಾಂಧಿ ಕುರಿತ ಸಿನೆಮಾ ಪ್ರದರ್ಶನ..

ಗಾಂಧಿಯ

ನೆನಪು

ಇಂದಾಲಜಿಯ

ಮೆಲುಕು

ಕನ್ನಡದ

ಕನಸು.

ಈ ದಿನ ವೂರ್ಜ್ ಬರ್ಗ್ ನಲ್ಲಿ ಎಲ್ಲೆಡೆ ಗಾಂಧಿಯ ಶಾಂತಿಯ ಮೌನ. ಸಂಜೆ ಏಳರ ಚರ್ಚ್ ಗಂಟೆಯ ನಾದ. ಮಧ್ಯಾಹ್ನದ ಥಾಯ್ ರೆಸ್ತೂರೆಂಟಿನ ಊಟದ ಬಳಿಕ ರಾತ್ರಿ ಊಟ ಬೇಡ. 9 ನೇ ಮಹಡಿಯ ನನ್ನ ಗೆಸ್ಟ್ ಹೌಸ್ ನ ವಿಶಾಲ ಕಿಟಿಕಿಯಿಂದ ಹೊರಗೆ ಇರುಳ ಕಣ್ಣು ಹಾಯಿಸಿದರೆ ಮಾಯಿನ್ ನದಿಯ ಎರಡು ಬದಿಯಲ್ಲಿ ಮಲಗಿರುವ ನಗರ ಭಾನುವಾರದ ರಜೆಯ ಸುಖದ ಮಂಪರಿನಲ್ಲಿದೆ. ದೀಪಗಳು ಮಾತ್ರ ನನಗಾಗಿ ಉರಿಯುತ್ತಾ ದೀಪಾವಳಿ ಆಚರಿಸುತ್ತಿವೆ.

 

October 29, 2009 Posted by bavivekrai | ಕಿಟ್ಟೆಲ್ ನಾಡಿನಲ್ಲಿ | , , , , | 2 Comments